ಅದೊಂದು ಶುಭದಿನ. ಒಂದು ರೈಲಿನಲ್ಲಿ ಒಬ್ಬ ತಂದೆ ಆತನಿಗೊಬ್ಬ ವಯಸ್ಕನಾದ ಮಗ ಪ್ರಯಾಣಿಸುತ್ತಿದ್ದರು. ಮಗನಿಗೆ ಎಲ್ಲಿಲ್ಲದ ಕೌತುಕ. ಆತ ಕಿಟಕಿಯ ಹೊರ ನೋಡುತ್ತಿದ್ದುದನ್ನು ಸಹ ಪ್ರಯಾಣಿಕರು ಅಚ್ಚರಿಯೆಂಬಂತೆ ನೋಡುತ್ತಿದ್ದರು. ಮಗ ತನ್ನ ತಂದೆಗೆ ಕಿಟಕಿಯ ಹೊರ ತೋರಿಸುತ್ತಾ ಹೇಳುತ್ತಿದ್ದ. 'ನೋಡಪ್ಪಾ, ಹೊರಗೆ ಎಂತಾ ಸೌಂದರ್ಯವಿದೆ! ಮರ-ಗಿಡಗಳು ಹಿಂದೆ, ಹಿಂದೆ ಓಡುತ್ತಿವೆ'. ತಂದೆ ಮಗನಿಗೆ ಸಮಾಧಾನಿಸುತ್ತಿದ್ದ. ಹೌದು ಇದು ಅದ್ಭುತವೆಂಬಂತೆ ಸಮಾಧಾನಿಸುತ್ತಿದ್ದ. ಸ್ವಲ್ಪ ಪ್ರಯಾಣದ ನಂತರ ಮಗ ಮತ್ತೆ ತಂದೆಗೆ ಹೇಳಿದ. 'ನೋಡಪ್ಪಾ, ಹೊರಗೆ ಮಳೆ ಬರುವಂತಾಗಿದೆ. ಮೋಡಗಳು ನಮ್ಮಿಂದ ಹಿಂದೆ ಹಿಂದೆ ಓಡುತ್ತಿವೆ'. ಸಹ ಪ್ರಯಾಣಿಕನೊಬ್ಬನಿಗೆ ಇವನ ವರ್ತನೆ ವಿಚಿತ್ರವೆನಿಸಿತು. ರೈಲು ಇನ್ನೂ ಮುಂದೋಡಿತು. ಅಲ್ಲಿ ದನ-ಕರುಗಳು ಮೇಯುತ್ತಿದ್ದವು. ಅದನ್ನು ತೋರಿಸಿ ಮಗ ತಂದೆಗೆ ಹೇಳಿದ. ನೋಡಪ್ಪಾ, ದನ-ಕರುಗಳು ಮೇಯುತ್ತಲೇ ಹಿಂದೆ ಹಿಂದೆ ಸಾಗುತ್ತಿವೆ. ಸಹ ಪ್ರಯಾಣಿಕನಿಗೆ ಈಗ ಇವನ ವರ್ತನೆ ಕಿರಿ ಕಿರಿಯಾದಂತೆನಿಸಿತು. ಆತ ಆ ತಂದೆಗೆ ಹೇಳಿದ. 'ಏನು, ನಿಮ್ಮ ಮಗ ಇಷ್ಟು ದೊಡ್ಡವನು. ಆದರೆ ಆತನ ವರ್ತನೆ ತೀರಾ ವಿಚಿತ್ರವಾಗಿದೆ. ಇವನನ್ನು ಒಬ್ಬ ಒಳ್ಳೆಯ ಮನೋ ವೈದ್ಯರ ಬಳಿಯಲ್ಲಿ ಯಾಕೆ ತೋರಿಸಬಾರದು'? ಆ ತಂದೆ ತುಂಬಾ ಸಮಾಧಾನದಿಂದ ಸಹ ಪ್ರಯಾಣಿಕನಿಗೆ ಉತ್ತರಿಸಿದ. 'ಹೌದು. ನಾವೀಗ ಒಬ್ಬ ವೈದ್ಯರನ್ನು ಕಂಡೇ ವಾಪಸಾಗುತ್ತಿದ್ದೇವೆ. ನನ್ನ ಮಗ ತೀರಾ ಚಿಕ್ಕ ವಯಸ್ಸಿನಲ್ಲೇ ತನ್ನೆರಡು ಕಂಗಳನ್ನೂ ಕಳೆದುಕೊಂಡ. ಆತನಿಗೆ ಈಗಷ್ಟೇ ಮತ್ತೆ ದೃಷ್ಟಿ ಬಂದಿದೆ. ಆತನಿಗೆ ಈಗ ಇವೆಲ್ಲವೂ ಹೊಸತು. ಹಾಗಾಗಿ ಆತನ ವರ್ತನೆ ಹೀಗಿದೆ. ದಯಮಾಡಿ ಸ್ವಲ್ಪ ಸಹಕರಿಸಿ'.
ಕಣ್ಮುಂದಿನ ಸಂಗತಿಗಳು ತೀರಾ ಭಿನ್ನವಾಗಿದ್ದಿರಬಹುದು. ಯಾವ ವರ್ತಮಾನ ಸಂಗತಿಗಳನ್ನೂ ಒಮ್ಮೆ ನೋಡಿ ತೀರ್ಮಾನ ಹೇಳಲು ಕಷ್ಟವಲ್ಲವೇ?
No comments:
Post a Comment