ಒಬ್ಬ ರಾಜ. ಆತನಿಗೊಬ್ಬ ಕುಶಲಿ ಮಂತ್ರಿ. ರಾಜನಿಗೊಮ್ಮೆ ತನಗೆ ಯಾವಾಗಲೂ ಮಾರ್ಗದರ್ಶಿಯಾಗುವಂತಹ ವಸ್ತುವನ್ನೇನಾದರೂ, ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರಬೇಕೆನಿಸಿತು. ರಾಜ ತನ್ನ ಮಂತ್ರಿಯ ಬಳಿ ಸಲಹೆ ಕೇಳಿದ. ತನ್ನ ಜೀವನದುದ್ದಕ್ಕೂ ಸಹಕಾರಿಯಾಗಬಹುದಾದ ಯಾವುದಾದರೂ ಮೂರು ಪದಗಳನ್ನು ಹೇಳುವಂತೆಯೂ, ಮತ್ತೆ ಆ ಮೂರು ಪದಗಳನ್ನು ತನ್ನ ಉಂಗುರದಲ್ಲಿ ಕೆತ್ತಿಸಿ ತಾನು ಯಾವಾಗಲೂ ಧರಿಸುವುದೆಂದು ತೀರ್ಮಾನಿಸಿದ. ಅಂತೆಯೇ ಮಾಡಿದ. ಕಾಲಾಂತರದಲ್ಲಿ ಆ ರಾಜ್ಯದ ಮೇಲೆ ಶತ್ರುಗಳ ಧಾಳಿಗಳಾದವು. ಯುದ್ಧಗಳಾದವು. ಯುದ್ಧದಲ್ಲಿ ರಾಜ ಸೋತ. ತನ್ನ ರಾಜ್ಯವನ್ನು ಕಳೆದುಕೊಂಡ. ಸಂಪತ್ತನ್ನು, ತನ್ನ ಜನರನ್ನು ಕಳೆದುಕೊಂಡ. ತನ್ನೆಲ್ಲವನ್ನೂ ಕಳೆದುಕೊಂಡು ಅಕ್ಷರಶ: ನಿರ್ಗತಿಕನಾಗಿ ಕೈಚೆಲ್ಲಿ ಒಂದು ನದಿಯ ಬಳಿ ಬಂದು ಕೂತ. ಇನ್ನು ಮುಂದೇನೆಂದು ಆತನಿಗೆ ಚಿಂತಿಸಹತ್ತಿತು. ತನಗೆ ಆತ್ಮಹತ್ಯೆಯೊಂದೇ ದಾರಿಯೆಂದು ಮನಗಂಡು ಸಾಯಲು ಮುಂದಾದ. ಇದ್ದಕ್ಕಿದ್ದಂತೆ ಅತನ ಕೈ ಮೇಲೆ ಬೆಳಕು ಬಿದ್ದು ಉಂಗುರ ಮಿನುಗಿತು. ಆ ಕ್ಷಣ ಅದು ಆ ರಾಜ್ಯಭ್ರಷ್ಟ ರಾಜನ ಗಮನವನ್ನು ತನ್ನೆಡೆ ಸೆಳೆಯಿತು. ಅಲ್ಲಿ ಮೂರು ಪದಗಳು ಕೆತ್ತಲ್ಪಟ್ಟಿತ್ತು. ಅವು - "ಇದು ಹೀಗೇ ಇರದು". ರಾಜ್ಯಭ್ರಷ್ಟ ರಾಜನಿಗೆ ಈ ಮೂರು ಪದಗಳು ಆಶಾಕಿರಣಗಳಾಗಿ ಕಂಡವು. ತನ್ನ ಆತ್ಮಹತ್ಯೆಯ ಪ್ರಯತ್ನವನ್ನು ಕೈಬಿಟ್ಟು ಪುನ: ಮೇಲೆದ್ದ. ತನ್ನ ಜನರನ್ನು ಹುಡುಕಿದ, ಒಟ್ಟುಗೂಡಿಸಿದ. ತನ್ನದೇ ಗುಂಪನ್ನು ಕಟ್ಟತೊಡಗಿದ. ಒಂದು ಚಿಕ್ಕ ಸೇನೆಯನ್ನು ಕಟ್ಟುವವರೆಗೆ ತನ್ನ ಪ್ರಯತ್ನ ಮುಂದುವರೆಸಿ ಯಶಸ್ವಿಯಾದ. ಮುಂದೆ ಇದೇ ಸೇನೆಯನ್ನು ಬಳಸಿ ಪುನ: ಯುದ್ಧ ಮಾಡಿದ. ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ. ಆ ದಿನಗಳು ಮರಳಿ ಆತನಿಗೆ ದೊರೆತವು. ರಾಜನಿಗೆ ಪುನ: ಪಟ್ಟಾಭಿಷೇಕ. ಎಲ್ಲೆಡೆ ಸಂಭ್ರಮ. ನಗರವನ್ನೆಲ್ಲ ಸಿಂಗರಿಸಲಾಯಿತು. ಪಟ್ಟಾಭಿಷೇಕಕ್ಕಾಗಿ ರಾಜನನ್ನು ರಥದಲ್ಲಿ ಕುಳ್ಳರಿಸಿ ಕರೆತರಲಾಗುತ್ತಿತ್ತು. ಆ ಸಮಯದಲ್ಲಿ ಪಟ್ಟಾಭಿಷೇಕಕ್ಕಾಗಿ ಸಿಂಗರಿಸಿದ ದೀಪದ ಬೆಳಕು ಮತ್ತೆ ಆತನ ಕೈಯುಂಗುರದ ಮೇಲೆ ಬಿದ್ದು, ಉಂಗುರ ಮಿನುಗಿತು. ಆ ಸಂಭ್ರಮದ ಕ್ಷಣದಲ್ಲಿಯೂ ಒಮ್ಮೆ ಆ ಮೂರು ಪದಗಳು ರಾಜನ ಗಮನ ಸೆಳೆದವು. - "ಇದು ಹೀಗೇ ಇರದು".
No comments:
Post a Comment