ಪುರಾತನ ಕಾಲದಲ್ಲಿ ಕಾಗೆ ಮತ್ತು ಗೂಬೆಗಳು ಬೆಳ್ಳಗಿದ್ದವು. ಹಿಮದಂತೆ ಬೆಳ್ಳಗಿದ್ದವು. ಒಮ್ಮೆ ಅವುಗಳಿಗೆ ಶುದ್ಧತೆಯ ಪ್ರತೀಕವಾದ ತಮ್ಮ ಬಿಳಿ ಬಣ್ಣದ ಬಗ್ಗೆ ಜಿಗುಪ್ಸೆ ಬಂದಿತು. ಬೇರೆ ಬೇರೆ ಪಕ್ಷಿಗಳ ಬೇರೆ ಬೇರೆ ಬಣ್ಣಗಳನ್ನು ಕಂಡು ಅವು ಅಸೂಯೆಪಟ್ಟವು ಮತ್ತು ತಾವೂ ತಮ್ಮ ಬಣ್ಣಗಳನ್ನು ಬದಲಿಸಬೇಕೆಂದು ನಿರ್ಣಯಿಸಿದವು. ಕಾಗೆ ಗೂಬೆಗೆ, ಮೊದಲು ನಾನು ನಿನ್ನ ಮೈಮೇಲೆ ಬಣ್ಣಗಳನ್ನು ಬಿಡಿಸುತ್ತೇನೆ, ನಂತರ ನೀನು ನನ್ನ ಮೇಲೆ ಬಿಡಿಸು ಎಂದಿತು. ಒಪ್ಪಂದದಂತೆ ಬಿಳಿಯ ಗೂಬೆಯ ಮೇಲೆ ಕಾಗೆ ಕಪ್ಪು ಕಂದು, ದೊಡ್ಡ ಚಿಕ್ಕ ವೃತ್ತಗಳನ್ನು ಬಿಡಿಸಿತು. ಗೂಬೆಗೆ ತನ್ನ ಮೈಯನ್ನು ನೋಡಿಕೊಂಡು ಸಂತೋಷವಾಯಿತು. ಈಗ ಗೂಬೆಯ ಸರದಿ. ಕಾಗೆ ಸೂರ್ಯನಿಗೆ ಮೈಯೊಡ್ಡಿ ಕಣ್ಮುಚ್ಚಿ ಕುಳಿತಿತು. ಗೂಬೆ ಕಾಗೆಯ ಮೈಮೇಲೆ ಕಪ್ಪು ಕಪ್ಪು ಚುಕ್ಕೆಗಳನ್ನು ಬಿಡಿಸಿತು. ಬಿಡಿಸುವ ಕೆಲಸ ಪೂರ್ಣಗೊಂಡ ಮೇಲೆ ಗೂಬೆ ಕಾಗೆಯನ್ನೊಮ್ಮೆ ನೋಡಿತು. ಗೂಬೆಗೆ ಕಾಗೆ ತನಗಿಂತ ಹೆಚ್ಚು ಸುಂದರವಾಗಿ ಕಾಣಿಸುತ್ತಿದೆ ಎನ್ನಿಸಿತು. ಮುಂದಿನದು ಅಸೂಯೆ. ಅದರ ಮುಂದುವರಿಕೆ ಅದರ ಬಣ್ಣ ಕೆಡಿಸುವುದು. ಗೂಬೆಗೆ ತನ್ನನ್ನು ನೋಡಿಕೊಂಡಾಗ ಉಂಟಾದ ಸಂತೋಷ ಭಾವ ಅಳಿಸಿ ಅಸೂಯಾ ಭಾವ ಮನಸ್ಸನ್ನು ತುಂಬಿತು. ತಾನು ಹೇಗಿದ್ದರೂ ಪರವಾಗಿಲ್ಲ. ಕಾಗೆ ಮಾತ್ರ ಚೆನ್ನಾಗಿ ಕಾಣದಂತೆ ಮಾಡಬೇಕೆನ್ನಿಸಿತು. ಗೂಬೆಯು ಮೊದಲು ತನ್ನ ಮನಸ್ಸನ್ನು ಕೆಡಿಸಿಕೊಂಡಿತು. ಕಾಗೆಯನ್ನು ರೂಪದಲ್ಲಿ ಕೆಡಿಸುವ ಮನಸ್ಸು ಮಾಡಿತು. ಗೂಬೆ ತಾನು ಬಿಡಿಸಿದ ಕರಿಯ ಚುಕ್ಕೆಗಳನ್ನೆಲ್ಲ ಸೇರಿಸಿ ಸಂಪೂರ್ಣ ಕಪ್ಪು ಬಣ್ಣ ಬರುವಂತೆ ಮಾಡಿತು ಮತ್ತು ಕಾಗೆ ಕಣ್ಣು ಬಿಡುವುದಕ್ಕಿಂತ ಮುಂಚೆ ಹಾರಿಹೋಯಿತು. ಇತ್ತ ಕಾಗೆ ಕಣ್ದೆರೆತು ತನ್ನನ್ನೊಮ್ಮೆ ನೋಡಿಕೊಂಡಿತು. ಸಂಪೂರ್ಣ ಕಪ್ಪು. ಕರಿಗಪ್ಪು. ಕಾಗೆ ನೊಂದಿತು. ಮಿತ್ರ ತನಗೆ ಮೋಸ ಮಾಡಿದನೆಂದು ನೊಂದಿತು. ಅಂದಿನಿಂದ ಕಾಗೆ ಮತ್ತು ಗೂಬೆಗಳಿಗೆ ಅದೇ ಬಣ್ಣಗಳಂತೆ.
ಸ್ವತ: ಕೆಟ್ಟು, ಪರರನ್ನು ಕೆಡಿಸುವುದು ಅಸೂಯೆ.
No comments:
Post a Comment