Wednesday, October 14, 2015

ಗುರು ಪ್ರಸಾದ at my desk. Please help to read yourself

ಒಬ್ಬ ವ್ಯಾಪಾರಿ. ಆತನ ವ್ಯಾಪಾರ ದೇಶ-ದೇಶಗಳ ನಡುವೆ, ಹಡಗುಗಳ ಮೂಲಕ. ದುರದೃಷ್ಟವಶಾತ್ ಒಮ್ಮೆ ಸಮುದ್ರದಲ್ಲಿ ಬಿರುಗಾಳಿ ಎದ್ದು ಆತನ ಹಡಗುಗಳೆಲ್ಲ ಮುಳುಗಿದವು. ಅತನ ಅತಿ ದೊಡ್ಡ ಹೂಡಿಕೆ ನಷ್ಟವಾಗಿತ್ತು. ಈ ರೀತಿಯ ನಷ್ಟವನ್ನು ಅವನು ಎಂದೂ ಅನುಭವಿಸಿರಲಿಲ್ಲ. ಇದರಿಂದ ಚೇತರಿಸಿಕೊಳ್ಳುವುದು ಅಸಾಧ್ಯವೆನಿಸಿತ್ತು ಆ ವ್ಯಾಪಾರಿಗೆ. ಬೇರೆ ದಾರಿಗಾಣದೆ ಆತ್ಮಹತ್ಯೆಯ ಹಾದಿ ತುಳಿದಿದ್ದ. ಆ ಸಮಯದಲ್ಲಿ ಆ ವ್ಯಾಪಾರಿಗೆ ಒಬ್ಬ ವೃದ್ಧನ ಪರಿಚಯವಾಯಿತು. ತಾನೂ ಒಬ್ಬ ವ್ಯಾಪಾರಿಯಾಗಿದ್ದೆನೆಂದೂ, ಅತಿ ಹೆಚ್ಚು ಧನ ಸಂಪಾದನೆ ಮಾಡಿದ್ದೇನೆಂದೂ ಆ ವೃದ್ಧ ತನ್ನ ಪರಿಚಯ ಮಾಡಿಕೊಂಡ. ಈ ವ್ಯಾಪಾರಿಯ ಕಷ್ಟದ, ನಷ್ಟದ ಕತೆಯನ್ನು ಆ ವೃದ್ಧ ಆಲಿಸಿದ, ಸ್ವತ: ನೊಂದ, ಸಂತೈಸಿದ. ವೃದ್ಧನಿಗೆ ಏನೆನ್ನಿಸಿತೋ, ತನ್ನಲ್ಲಿದ್ದ ಬ್ಯಾಂಕ್ ಚೆಕ್ ವೊಂದನ್ನು ತೆಗೆದು, ತನ್ನ ಸಹಿ ಮಾಡಿ ಆ ವ್ಯಾಪಾರಿಗೆ ಕೊಟ್ಟ. "ನೀನು ಪುನ: ವ್ಯಾಪಾರವನ್ನಾರಂಭಿಸು, ಸಣ್ಣದಾಗೇ ಪ್ರಾರಂಭಿಸು, ಒಂದು ವೇಳೆ ಮತ್ತೆ ಎಂದಾದರೂ ನೀನು ನಷ್ಟವನ್ನನುಭವಿಸಿ ಸಾಯಲು ಹೊರಟೆ ಎಂದಾದರೆ, ಆ ನಿರ್ಧಾರವನ್ನು ಬದಲಿಸು. ನನ್ನ ಹತ್ತಿರ ಸಾಕಷ್ಟು ಹಣವಿದೆ. ಈ ಚೆಕ್ಕನ್ನು ಉಪಯೋಗಿಸಿ ಹಣವನ್ನು ಪಡೆದುಕೋ, ಹೊಸ ಜೀವನವನ್ನು ಪ್ರಾರಂಭಿಸು" ಎಂದು ಆ ವ್ಯಾಪಾರಿಗೆ ಹೇಳಿ ಆ ವೃದ್ಧ ಹೋದ. 

ವ್ಯಾಪಾರಿಗೆ ಆ ಚೆಕ್ ಹೊಸ ಚೈತನ್ಯವನ್ನು ತುಂಬಿತು. ತಾನಿಲ್ಲಿಗೆ ಬಿಡಬಾರದೆಂದು, ಪುನ: ನಿರ್ಧರಿಸಿದ. ಮತ್ತೆ ಸೋತರೆ ಹೇಗಿದ್ದರೂ ಜೀವನಕ್ಕೆ ಈ ಚೆಕ್ ಇದ್ದೇ ಇದೆ ಎಂದು ಭಂಡ ಧೈರ್ಯ ಮಾಡಿ ಪುನ: ತನ್ನ ವ್ಯಾಪಾರವನ್ನು ಆರಂಭಿಸಿದ. ಸಣ್ಣದಾಗಿ ಶುರು ಮಾಡಿ, ಮತ್ತೆ ಲಾಭಗಳಿಸುತ್ತಾ ಸಾಗಿದ. ಆರು ತಿಂಗಳು ಕಳೆಯುವ ಹೊತ್ತಿಗೆ ಆ ವ್ಯಾಪಾರಿಗೆ ಆತ್ಮವಿಶ್ವಾಸ ಬೆಳೆದಿತ್ತು. ತಾನೀಗ ಸಮರ್ಥವಾಗಿ ತನ್ನ ವ್ಯವಹಾರ ನಿಭಾಯಿಸಬಲ್ಲೆ ಮತ್ತು ಇನ್ನೆಂದೂ ನನಗೆ ಈ ಚೆಕ್ಕಿನ ಅವಶ್ಯಕತೆ ಬರದಂತೆ ಜೀವನ ನಿರ್ವಹಿಸೆಬಲ್ಲೆನೆಂಬ ವಿಶ್ವಾಸ ವ್ಯಾಪಾರಿಗೆ ಬಂದಿತ್ತು. ಇನ್ನು ಈ ಚೆಕ್ಕನ್ನು ಆ ವೃದ್ಧನಿಗೆ ಮರಳಿಸಿ ಧನ್ಯವಾದಗಳನ್ನು ತಿಳಿಸಬೇಕೆಂದು ನಿರ್ಧರಿಸಿದ. ಆ ವೃದ್ಧನನ್ನು ಹುಡುಕತೊಡಗಿದ. ಬಹಳ ಹುಡುಕಾಟದ ನಂತರ ಒಂದು ಆಸ್ಪತ್ರೆಯಲ್ಲಿ ಆ ವೃದ್ಧನನ್ನು ಹಿಡಿಯಲು ಸಾಧ್ಯವಾಯಿತು. ಅಲ್ಲಿ ಆ ವೃದ್ಧನನ್ನು ನೋಡಿಕೊಳ್ಳುವ ದಾದಿಯ ಬಳಿ ಮಾತನಾಡಿದ. ಈ ವ್ಯಾಪಾರಿಯನ್ನು ನೋಡಿದ ದಾದಿ ಕೇಳಿದಳು - "ಏನು? ಈ ವೃದ್ಧ ನಿಮಗೂ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಂಡನೇ? ನಿಮಗೇನಾದರೂ ಖಾಲಿ ಚೆಕ್ ಗೆ ಸಹಿ ಹಾಕಿಕೊಟ್ಟನೆ?" ವ್ಯಾಪಾರಿ ಹೌದೆಂದು ತಲೆಯಲ್ಲಾಡಿಸಿದ. ದಾದಿ ಪುನ: ಹೇಳಿದಳು - "ಈತನೊಬ್ಬ ಮನೋರೋಗಿ, ಈಗ ಆರು ತಿಂಗಳ ಮೊದಲು ಈ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ. ಸಿಕ್ಕ ಸಿಕ್ಕಿದವರಿಗೆ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಳ್ಳುವುದು ಮತ್ತು ಖಾಲಿ ಚೆಕ್ಕಿಗೆ ಸಹಿಹಾಕಿ ಕೊಡುವುದು ಈತನದೊಂದು ಗೀಳು". ವ್ಯಾಪಾರಿಯ ಮೈ ಬೆವತಿತ್ತು. ಆದರೆ ಆ ಖಾಲಿ ಚೆಕ್ಕು ಆತನ ಜೀವನವನ್ನು ಬದಲಿಸಿತ್ತು.

ಜೀವನದಲ್ಲಿ ಸಂಪೂರ್ಣ ಸೋತು ಸಾಯುವ ಹಂತದಲ್ಲಿದ್ದಾಗ, ದೇವರು ಸಣ್ಣ ಅವಕಾಶವೊಂದನ್ನು ನೀಡುತ್ತಾನೆ. ಆತನನ್ನು ನಂಬಿ, ಧನಾತ್ಮಕವಾಗಿ ಚಿಂತಿಸಿ ಕೈಹಿಡಿದರೆ ಪುನ: ಮೇಲೇಳಲು ಸಾಧ್ಯವಾಗಬಹುದು.

No comments:

Post a Comment