Monday, October 12, 2015

ಪ್ರಾಯದಿಂದ ಸಣ್ಣವರು, ದೊಡ್ಡ ವಿಚಾರ.



ಅದೊಂದು ಮೂರು - ಮೂರೂವರ್ಷದ ಕೂಸು. ಅದಕ್ಕೆ ದಿನ ಪತ್ರಿಕೆಯಲ್ಲಿ ಬರುವ ಭಾವಚಿತ್ರಗಳನ್ನು ನೋಡುವುದು ಮತ್ತು ಇದರ ಬಗ್ಗೆ ಕತೆ ಹೇಳೆಂದು ಕೇಳುವುದು ಅಭ್ಯಾಸ. ವಿಜಯವಾಣಿಯ ವಾರದಲ್ಲೊಮ್ಮೆ ಬರುವ ಸಂಸ್ಕೃತಿ ಎಂಬ ಮತ್ತೊಂದು ಪತ್ರಿಕೆಯಲ್ಲಿ ಅನಂತನ ಚತುರ್ದಶಿಯ ನಿಮಿತ್ತ ಲೇಖನವೊಂದು ಪ್ರಕಟವಾಗಿತ್ತು. ಅದರಲ್ಲಿ ಅನಂತ ಪದ್ಮನಾಭನ ಸುಂದರವಾದ ಚಿತ್ರವೂ ಇತ್ತು. ಈ ಕೂಸಿಗೆ ಕುತೂಹಲ ಬಂತು. ಅದೇನೆಂದು ಕೇಳಿತು. ಹೆತ್ತವರು ವಿವರಿಸಿದರು. ಮಗುವಿಗೆ ಕುತೂಹಲ. ಅಲ್ಲ, ಆ ದೇವರು ಹಾವಿನ ಮೇಲೇಕೆ ಮಲಗಿದ್ದಾನೆ? ಅದು ಅವನಿಗೆ ಕಚ್ಚುವುದಿಲ್ಲವಾ? ಪ್ರಶ್ನೆ. ಹೆತ್ತವರಿಗೆ ಮುಗ್ಧ ನಗು. ಅದರ ವಿಚಾರವಾಗಿ ಕತೆಯನ್ನು ಹೇಳಲಾಯಿತು. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ. ಮಗುವೆಂದಿತು. ನಾನವನನ್ನು ನೋಡಬೇಕು. ಅವನೆಲ್ಲಿರುತ್ತಾನೆ? ಹೇಗೆ ನೋಡುವುದು? ಮತ್ತೆ ಹೆತ್ತವರ ವಿವರಣೆ. ಮಗು, ಅವನು ನಿನ್ನೊಳಗೇ ಇದ್ದಾನೆ. ನೀನವನನ್ನು ನೋಡಲು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದಪ್ಪ. ಇದನ್ನು ಹೇಳಿದುದದರ ಉದ್ದೇಶ, ಆ ಮಗು ತುಂಬಾ ತುಂಟ. ಒಂದರೆ ಕ್ಷಣವೂ ಸುಮ್ಮನಿರಲಾರದ ಕೂಸು. ಹಾಗಾಗಿ ಸ್ವಲ್ಪ ಹೊತ್ತು ಮಗುವನ್ನು ಸುಮ್ಮನೆ ಕೂರಿಸುವ ಹೆತ್ತವರ ವ್ಯರ್ಥ ಪ್ರಯತ್ನ. ಆದರೆ ಏನಾಶ್ಚರ್ಯ? ಅದನ್ನು ಕೇಳಿದ ಮಗು, ಕೂತಿತು. ಸುಮ್ಮನೆ ಕಣ್ಮುಚ್ಚಿ ಒಂದರೆ ಕ್ಷಣ ಕೂತಿತು. ಆ ಮಗುವಿಗೆ ಏನರ್ಥವಾಯಿತೋ, ಅದು ದೇವರನ್ನು ಕಂಡಿತೋ, ಕಾಣುವುದೋ ಪ್ರಸ್ತುತವಲ್ಲ. ಆದರೆ ಅಷ್ಟು ಚಿಕ್ಕ ಮಗುವಿಗೆ ತಾನು ಇವನನ್ನು ನೋಡಬೇಕು ಅನ್ನಿಸಿದ್ದಿದೆಯಲ್ಲ, ಅದು ದೊಡ್ಡ ವಿಚಾರ. 

No comments:

Post a Comment