ಒಂದು ಘನ ಘೋರವಾದ ಕಾಡು. ಅಲ್ಲೊಬ್ಬ ಭಯಂಕರ ರಾಕ್ಷಸ. ಕೋರೆ ಹಲ್ಲುಗಳು, ಉರಿಗಣ್ಣುಗಳು, ಉದ್ದುದ್ದ ಉಗುರುಗಳು, ಭಯಾನಕ ಬಾಹುಗಳು, ಕೆದರಿದ ಕೂದಲು... ಒಟ್ಟಾರೆ ಭಯಾನಕ. ಆ ಕಾಡಿನ ದಾರಿಯಲ್ಲಿ ಬರುವ ಜೀವಿಗಳು ಆತನ ಆಹಾರ. ಆ ದಾರಿಯಲ್ಲಿ ಬರುವ ಜೀವಿಗಳನ್ನು ಆತ ತನ್ನ ಭಯಾನಕ ವ್ಯಕ್ತಿತ್ವದಿಂದ ಹೆದರಿಸುತ್ತಿದ್ದ. ಅವರು ಹೆದರುವುದನ್ನು ಕಂಡು ಖುಷಿ ಪಡುತ್ತಿದ್ದ. ಇನ್ನಷ್ಟು, ಮತ್ತಷ್ಟು ಹೆದರಿಸಿ, ಓಡಿಸಿ, ಭಯ ಹುಟ್ಟಿಸಿ ಸಾಯಿಸಿ ತಿನ್ನುತ್ತಿದ್ದ ಆ ಭಯೋತ್ಪಾದಕ. ಆ ದಾರಿಯಲ್ಲಿ ಒಬ್ಬ ಯುವಕ ನಡೆದು ಬರುತ್ತಿದ್ದ. ಈ ರಾಕ್ಷಸನಿಗೆ ಆ ಯುವಕ ಇಂದಿನ ಆಹಾರ. ಎಂದಿನಂತೆ ಮರೆಯಿಂದ ಧುತ್ತೆಂದು ಯುವಕನ ಮುಂದೆ ರಾಕ್ಷಸ ಪ್ರತ್ಯಕ್ಷನಾದ. ಒಮ್ಮೆಲೆ ಹೆದರಿಸುವುದು ರಾಕ್ಷಸನ ಉದ್ದೇಶ. ಆದರೆ ಆದಿನ ಎಂದಿನ ದಿನವಾಗಿರಲಿಲ್ಲ. ಯುವಕನಿಗೆ ಒಳಗೆ ಒಮ್ಮೆಲೆ ಭಯವಾದರೂ ಅದನ್ನು ವ್ಯಕ್ತಪಡಿಸಲಿಲ್ಲ. ಆ ಕ್ಷಣವನ್ನು ಆ ಯುವಕ ಎಂದಿನಂತೆ ಸ್ವೀಕರಿಸಿದ. ರಾಕ್ಷಸನ ಮುಂದೆ ತಲೆ ಎತ್ತಿ ನಿಂತ. ರಾಕ್ಷಸನಿಗೆ ಇದು ಅನಿರೀಕ್ಷಿತ. ಅಂತ ಭಯೋತ್ಪಾದಕನೂ ಒಮ್ಮೆ ಈ ಯುವಕನ ಧೈರ್ಯ ಮೆಚ್ಚಿ ಮಾತನಾಡಲುತ್ಸುಕನಾದ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರದೇ ಹೋದರೆ ಕ್ರಿಯೆಯ ಮುಂದಿನ ನಡಿಗೆಯೇ ಬೇರೆಯದ್ದಾಗಿರುತ್ತದೆ. ಹೆಚ್ಚಿನ ಸಮಸ್ಯೆ ಕ್ರಿಯೆಯನ್ನು ಸ್ವೀಕರಿಸುವ ರೀತಿ, ಜೀರ್ಣಿಸಿಕೊಳ್ಳುವ ರೀತಿ, ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿದೆ. ಸಂಬಂಧಗಳು ಹಳಸಲು ಇದು ಕಾರಣವಾಗಬಹುದು. ಯಾವುದೇ ಹಳಸಿದ ಸಂಬಂಧಗಳ ಹಿಂದೆ ಈ ರೀತಿಯ ಒಂದು ಕ್ರಿಯೆ-ಪ್ರತಿಕ್ರಿಯೆಗಳ ಸರಣಿ ಇರುತ್ತದೆ. ದೇಹದ ಆರೋಗ್ಯದ ಸಮಸ್ಯೆಗೂ ಇದೇ ಕಾರಣ. ಬಯ್ದಾಟ, ದ್ವೇಷ ಸಾಧನೆ ಇವೇ ಅಲ್ಲವೆ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಮೂಲ ಕಾರಣಗಳು? ಎಷ್ಟೋ ದೊಡ್ಡ ಸಾಧನೆಗಳನ್ನು ಮಾಡಿದವರು ಈ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಗುಣವುಳ್ಳವರು. ಮತ್ತೆಷ್ಟೋ ರೋಗಗಳಿಗೆ ಮೊದಲ ಮದ್ದು ಮಾನಸಿಕ ಸ್ಥೈರ್ಯ.
No comments:
Post a Comment