Thursday, October 15, 2015

ಗುರು ಪ್ರಸಾದ at my desk. Please help to read yourself



ಒಂದು ಊರು. ಊರಿಗೊಬ್ಬ ಸಂತ. ಸಂತನಿಗೆ ಅಪಾರವಾದ ಜ್ಞಾನವಿತ್ತು. ಗ್ರಾಮಸ್ಥರಿಗೆ ಸಂತನ ಜ್ಞಾನದ ಬಗ್ಗೆ ಅಪಾರವಾದ ಅಜ್ಞಾನವೂ ಇತ್ತು. ಒಂದಿನ ರಾತ್ರಿ ಸಂತನಿಗೊಂದು ಕನಸು ಬಿತ್ತು. ಕನಸು ಹೀಗಿತ್ತು - ಇಂದಿನಿಂದ ಸರಿಯಾಗಿ ೩ ದಿನಗಳ ನಂತರ ಈ ಊರಿನಲ್ಲಿ ಮಳೆಯಾಗುತ್ತದೆ. ಅತ್ಯಧಿಕ ಮಳೆಯಾಗಿ ಹಳ್ಳ - ಕೊಳ್ಳಗಳು ತುಂಬಿ ಹರಿಯುತ್ತವೆ. ಆದರೆ ಆ ನೀರನ್ನೇನಾದರೂ ಕುಡಿದರೆ, ಕುಡಿದವರಿಗೆ ಹುಚ್ಚು ಹಿಡಿಯುತ್ತದೆ. ಸಂತನಿಗೆ ಎಚ್ಚರವಾಯಿತು, ಭಯವಾಯಿತು. ಮಾರನೆ ದಿನದಿಂದಲೇ ಆ ಸಂತ ಊರಿನವರನ್ನು ಎಚ್ಚರಿಸಲು ಪ್ರಾರಂಭಿಸಿದ. ಇಂದಿನಿಂದ ಮೂರುದಿನಗಳ ನಂತರದ ಮಳೆ ನೀರನ್ನು ಕುಡಿಯದಿರಿ ಎಂದು ಎಲ್ಲರಿಗೆ ಹೇಳುತ್ತಾ ಬಂದ. ಈ ಊರಿನಿಂದ ಬಹುದೂರ ಒಂದು ಬೆಟ್ಟವಿದೆ. ಬನ್ನಿ, ಅಲ್ಲಿಗೆ ಹೋಗಿ ತಂಗೋಣ ಎಂದ. ಗ್ರಾಮಸ್ಥರು ಸಂತನ ಮಾತಿಗೆ ಅಷ್ಟು ಗಮನವೀಯಲಿಲ್ಲ. ಉಪೇಕ್ಷಿಸಿದರು. ಆದರೆ ಸಂತ ಊರನ್ನು ಬಿಟ್ಟು ಬೆಟ್ಟ ಹತ್ತಿದ. ಆ ದಿನ ಬಂತು. ಮಳೆ ಪ್ರಾರಂಭವಾಯಿತು. ಹಳ್ಳ-ಕೊಳ್ಳಗಳು ತುಂಬಿದವು. ಜನ ಸಂತನನ್ನು ಮರೆತು ನೀರು ಕುಡಿದರು. ಕುಡಿದವರಿಗೆಲ್ಲ ಹುಚ್ಚು ಹಿಡಿಯಿತು. ಎಲ್ಲ ಗ್ರಾಮಸ್ಥರಿಗೂ ಹುಚ್ಚು ಹಿಡಿಯಿತು. 

ದಿನಗಳು ಉರುಳಿದವು. ಬೆಟ್ಟದ ಮೇಲೆ ಸಂತನೊಬ್ಬನೆ. ಆತನಿಗೂ ಕುತೂಹಲ ಬಂತು. ಯಾಕೆ ಒಮ್ಮೆ ಊರಿಗೆ ಹೋಗಿ ಪರಿಸ್ಥಿತಿ ಹೇಗಿದೆಯೆಂದು ನೋಡಿ ಬರಬಾರದು ಎನಿಸಿತು. ಬೆಟ್ಟದಿಂದಿಳಿದು ಊರಿಗೆ ಬಂದು ನೋಡಿದ. ಇಡೀ ಊರಿಗೇ ಊರೇ ಹುಚ್ಚು. ಸಂತ ಊರಿನವರನ್ನು ಕಂಡು ಮಾತನಾಡಿದ. ನಾನು ನಿಮಗೆ ಎಚ್ಚರಿಕೆ ನೀಡಿದ್ದೆ ಎಂದು ಹಲುಬಿದ. ಹಲವರಿಗೆ ಹಾಗೆ ಹೇಳಿದ. ಆದರೆ ಊರಿನವರಿಗೆಲ್ಲರಿಗೆ ಈ ಸಂತನ ವರ್ತನೆ ಸರಿ ಕಾಣಲಿಲ್ಲ. ಸಂತನಿಗೇನಾದರೂ ಹುಚ್ಚು ಹಿಡಿದಿರಬಹುದೇ ಎಂದು ಸಂಶಯಿಸಿದರು. ಬೈದರು, ಹೋಗಾಚೆ ಎಂದರು, ಕಲ್ಲು ಬೀಸಿದರು. ಸಂತ ತಪ್ಪಿಸಿಕೊಂಡು ಮತ್ತೆ ಬೆಟ್ಟ ಹತ್ತಿದ. ಹಲವಾರು ದಿನ ಕಳೆದ ನಂತರ ಸಂತನಿಗೆ ಮತ್ತೆ ಬೆಟ್ಟದಲ್ಲಿ ಒಬ್ಬನೆ ಕೂತು ಬೇಸರವಾಯಿತು. ಮತ್ತೆ ಊರು ಕರೆಯಿತು. ಮತ್ತೆ ಹೋದ. ಪುನ: ಊರಿನವರು ಇವನೊಬ್ಬ ಹುಚ್ಚನೆಂದು ಬೈದು ಓಡಿಸಿದರು. ಸಂತ ಮತ್ತೆ ಬೆಟ್ಟ ಹತ್ತಿದ. ಹಲವು ದಿನಗಳ ನಂತರ ಪುನ: ಅದೇ ಬೇಜಾರು. ಈ ಚಕ್ರಗಳು ಹಲವಾರು ಬಾರಿ ನಡೆದವು. ಕೊನೆಗೊಮ್ಮೆ ಸಂತ ದಿಕ್ಕೆಟ್ಟು ನಿರ್ಧರಿಸಿದ. ಊರಿಗೆ ಬಂದು ತಾನೂ ಕೆರೆಯ ನೀರನ್ನು ಕುಡಿದ. ಅಲ್ಲಿಗೆ ಎಲ್ಲವೂ ಸರಿಯಾದಂತಾಯಿತು.

ಸಂತನ ಪರಿಸ್ಥಿತಿ ಹಲವು ಸಂದರ್ಭಗಳಲ್ಲಿ ಬಂದೊದಗಬಹುದು. ಹತ್ತು ಜನರಾಡುವ ಮಿಥ್ಯೆಯ ನಡುವೆ ಒಬ್ಬರೆ ಸತ್ಯವನ್ನು ಪ್ರತಿಪಾದಿಸುವ ಸಂದರ್ಭ ಬರಬಹುದು. ಆ ಕ್ಷಣಗಳಲ್ಲಿ ಮಾನಸಿಕ ಸ್ಥೈರ್ಯ, ದೃಢ ನಂಬಿಕೆ, ನಿಲುವು ಅವಶ್ಯಕ.

No comments:

Post a Comment